ಹಣ ಕಡಿಮೆ ಕೊಟ್ಟಿದ್ದಕ್ಕೆ ಪುಟ್ ಪಾತ್ ಮೇಲೆ ಶವ ಇಟ್ಟು ಪರಾರಿಯಾಗಿದ್ದ ಆಂಬುಲೆನ್ಸ್ ಚಾಲಕ ಅರೆಸ್ಟ್ | ಜನತಾ ನ್ಯೂಸ್
ಬೆಂಗಳೂರು : ಕರೊನಾ ಸೋಂಕಿನಿಂದ ಮೃತಪಟ್ಟ ಶವ ಸಾಗಿಸಲು 18 ಸಾವಿರ ರೂ. ಕೊಡದ ಕಾರಣಕ್ಕೆ ಶವವನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ಹೋಗಿದ್ದ ಆಂಬುಲೆನ್ಸ್ ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ಚಿತಾಗಾರ ಉಸ್ತುವಾರಿ ಸತೀಶ್ ಎಂಬುವರು ನೀಡಿದ ದೂರಿನ ಮೇರೆಗೆ ತುಮಕೂರು ಮೂಲದ ಆ್ಯಂಬುಲೆನ್ಸ್ ಚಾಲಕ ಶರತ್ ಗೌಡ ಎಂಬಾತನನ್ನು ಬಂಧಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಮತ್ತೋರ್ವ ಆರೋಪಿ ನಾಗೇಶ್ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಕಳೆದ ಮೇ 24 ರಂದು ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನುಜ್ ಸಿಂಗ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ವೇಳೆ ಹೆಬ್ಬಾಳದ ಚಿತಾಗಾರಕ್ಕೆ ಶವ ಸಾಗಿಸಲು ಕುಟುಂಬಸ್ಥರ ಬಳಿ ಹಣ ಇರಲಿಲ್ಲ.
ಆಸ್ಪತ್ರೆಯ ಶವಾಗಾರದ ಸಿಬ್ಬಂದಿ ನಾಗೇಶ್, ಆಸ್ಪತ್ರೆಯ ಶವಾಗಾರದಲ್ಲಿ ಶವ ಇರಿಸಲು ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾನೆ. ಆ್ಯಂಬುಲೆನ್ಸ್ನಲ್ಲಿ ಚಿತಾಗಾರಕ್ಕೆ ಶವ ಸಾಗಿಸಲು ಚಾಲಕ 18 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ.
ಈ ವೇಳೆ 3 ಸಾವಿರ ರೂ.ಹಣ ಹೊಂದಿಸಿ ಉಳಿದ ಹಣ ಕೊಡುವುದಾಗಿ ಮೃತನ ಪತ್ನಿ ಹೇಳಿದ್ದಳು. ಹಣ ನೀಡದಿದ್ದರಿಂದ ಕೊನೆಗೆ ವಾಹನದಲ್ಲಿದ್ದ ಶವವನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ಪರಾರಿ ಆಗಿದ್ದ. ಈ ಕುರಿತು ಮೃತನ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಚಾಲಕನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.